Monday, October 19, 2009

ತ್ಸುನಾಮಿ


ಭೋರ್ಗರೆವ ಅಲೆಗಳು ಉಕ್ಕೇರಿ ಬರುತಲಿರೆ,
ಕಂಪಿಸುತ ಭೂಮಾತೆ ಮೈಯೆಲ್ಲ ನಡುಗುತಿರೆ;

ಸಾವಿನಲೆಯಪ್ಪಳಿಸಿ ಕೈ ಬೀಸಿ ಕರೆಯುತಿರೆ,
ಆರ್ಭಟಿಸಿ ಬಂತದೋ ಕಾಲಯಮನ ಕರೆ;

ಏನಿದೂ ಘೋರ ಭೂಕಂಪ ಜಲ ಪ್ರಳಯ,
ಯಾರ ಶಾಪದ ಫಲವು ಸುತ್ತಿಕೊಂಡಿತು ಧರೆಯ;

ನಾಳೆಗಳ ಚಿಂತನೆಯ ಹೊಸ ಆಸೆಗಳ ಹೊತ್ತ,
ಮರಿ ಹಕ್ಕಿಗಳು ಕಮರಿ ಹೋದವೆತ್ತ;

ಯಾರ ಕಾಲ್ತುಳಿತಕ್ಕೆ ಭೂಮಿ ನಲುಗಿದಳೋ,
ತನ್ನದೇ ಮಕ್ಕಳನು ಬಾಯ್ತೆರೆದು ನುಂಗಿದಳೋ;

ಅರಿತವರು ಯಾರಿಹರು ಎಲ್ಲವೂ ನಶ್ವರವು,
ಯುಗಯುಗಗಳು ಕಳೆದರೂ ನಾವಿದನು ಮರೆಯೆವು;

ಯಾವ ಮಾಯೆಯ ಸಂಚೋ ಹೊಂಚಿ ಬೀಸಿದ ಬಲೆಗೆ,
ಬಿದ್ದವರು ಎದ್ದವರು ಮರೆಯರಾ ವಿಷ ಘಳಿಗೆ!




No comments:

Post a Comment